
ಉಡುಪಿಯ ಡಾ ಟಿಎಂಎ ಪೈ ಶಿಕ್ಷಣ ಕಾಲೇಜಿನಲ್ಲಿ ಈಚೆಗೆ ತುಮರಿಯ ‘ ಕಿನ್ನರ ಮೇಳ’ದವರಿಂದ ‘ಜನಶತ್ರು’ ಎಂಬ ನಾಟಕ ಪ್ರದರ್ಶಿತಗೊಂಡಿತು. ಆಧುನಿಕ ರಂಗಭೂಮಿಯ ಹರಿಕಾರನೂ ವಾಸ್ತವವಾದದ ಪಿತಾಮಹನೂ ಆದ ಹೆನ್ರಿಕ್ ಇಬ್ಸನ್ ವಿರಚಿತ ‘ ಆ್ಯನ್ ಎನಿಮಿ ಆಫ್ ದ ಪೀಪಲ್ ‘ ನಾಟಕವನ್ನು ಆಧರಿಸಿದ ಈ ಕನ್ನಡ ನಾಟಕವನ್ನು ರಚಿಸಿ ನಿರ್ದೇಶನ ಮಾಡಿದವರು ಎಸ್.ಸುರೇಂದ್ರನಾಥ್.ಕೇವಲ ಐದೇ ಪಾತ್ರಗಳಿರುವ,ಸರಳ ರಂಗಸಜ್ಜಿಕೆಯ,ತೆಳುವಾದ ಕಥಾಹಂದರದ ಈ ನಾಟಕ ದುಡ್ಡಿನ ಅಹಂಕಾರಕ್ಕೆ ಬಿಕರಿಯಾದ ಬಹುಮತ ಹಾಗೂ ಬಹುಮತವಾದದ ವಿರುದ್ಧ ವ್ಯಕ್ತಿ ಒಂಟಿಯಾದರೂ ಸರಿ ತಾನು ಕಂಡ ಸತ್ಯದ ಪ್ರತಿಪಾದನೆ ಮಾಡಲೇಬೇಕು; ಒಂಟಿ ದನಿ ದುರ್ಬಲ ದನಿಯಲ್ಲ ಎಂಬುದನ್ನು ನಿರೂಪಿಸಲೇಬೇಕು ಎಂಬ ಪ್ರಬಲಸಂದೇಶವನ್ನು ನೀಡುತ್ತದೆ ಎಂದು ಕಾಲೇಜಿನ ಸಮನ್ವಯಾಧಿಕಾರಿ ಡಾ ಮಹಾಬಲೇಶ್ವರ ರಾವ್ ನುಡಿದು ಕಿನ್ನರ ಮೇಳ, ತುಮರಿ ಮಕ್ಕಳ ರಂಗಭೂಮಿಗೆ ನೀಡಿದ ಕೊಡುಗೆಗಳನ್ನು ಶ್ಲಾಘಿಸಿ ಸ್ವಾಗತ ಕೋರಿದರು.ವಿದ್ಯಾರ್ಥಿ ಶಿಕ್ಷಕರಿಗೆ ಇದೊಂದು ಅನನ್ಯ ಅನುಭವವಾಗಿತ್ತು.